ರೈತರ ದಿನಾಚರಣೆ

ಇವತ್ತು ಡಿ.23, “ರೈತ ದಿನಾಚರಣೆ” ನಮ್ಮ ಜನರಿಗೆ ಈ ಕುರಿತು ಎಷ್ಟು ಅರಿವಿದೆಯೋ ತಿಳಿಯದು. ಭಾರತದ ದೇಶದ ಬೆನ್ನೆಲುಬು ರೈತ ಎನ್ನಲಾಗುತ್ತದೆ, ಕೃಷಿಯೇ ದೇಶದ ಆರ್ಥಿಕತೆಯೂ ಮೂಲವಾಗಿತ್ತು ಎಂಬುದು ಯಾರಿಗೂ ತಿಳಿಯದ ಸಂಗತಿಯೇನಲ್ಲ ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ, ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ, ಕೃಷಿ ಜೀವನದ ಉಸಿರು ಯಾಕೆ ಎಂಬ ಪ್ರಶ್ನೆ ಕಾಡಬೇಕು ಮತ್ತು ಮಂಥನವಾಗಬೇಕು, ಈ ದಿನ ಇಂತಹದ್ದೊಂದು ಚರ್ಚೆಗೆ ವೇದಿಕೆಯಾಗಬಹುದು.

ವಿಚಾರದ ಮಂಥನಕ್ಕೆ ಮುನ್ನಾ ರೈತ ದಿನಾಚರಣೆಯ ಕುರಿತು ಒಂದು ಸಂಗತಿಯನ್ನು ಹೇಳಲೇಬೇಕು, ಭಾರತದ ದೇಶದ 5ನೇ ಪ್ರಧಾನ ಮಂತ್ರಿ ಹಾಗೂ ಅತೀ ಕಡಿಮೆ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಚೌಧುರಿ ಚರಣ್ ಸಿಂಗ್ ರ ಜನ್ಮ ದಿನವನ್ನು ಭಾರತ ದೇಶದಲ್ಲಿ ರೈತ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅಧಿಕೃತವಾಗಿ ಈ ಕುರಿತು ಸರ್ಕಾರಿ ಘೋಷಣೆಯಿಲ್ಲದಿದ್ದರೂ 80ರ ದಶಕದಲ್ಲಿ ಬಂದ ರೈತ ಚಳುವಳಿಯ ಸಂಧರ್ಭದಲ್ಲಿ ರೈತರು ಡಿ.23ರಂದು ರೈತದಿನಾಚರಣೆ ಆಚರಿಸುತ್ತಾರೆ.ಸಮಾಜವಾದಿ ರಾಮಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ್ ನಾರಾಯಣ್ ರ ಒಡನಾಡಿಯಾಗಿ ಗುರುತಿಸಿಕೊಂಡ ಚೌಧುರಿ ಚರಣ್ ಸಿಂಗ್ ಉತ್ತರ ಪ್ರದೇಶದ ಘಾಜಿಯಾಬಾದ್ ಜಿಲ್ಲೆಯ ನೂರ್ ಪುರ್ ಎಂಬ ಸಣ್ಣ ಹಳ್ಳಿಯವರು. ಡಿ.23, 1902ರಂದು ಜನಿಸಿದ ಚರಣ್ ಸಿಂಗ್ ಪ್ರತಿಭಾವಂತ ಯುವಕ. ಎಕಾನಮಿಕ್ಸ್ ಸ್ನಾತಕ ಪದವಿ ಹಾಗೂ ಕಾನೂನು ಪದವಿ ಪಡೆದ ಚರಣ್ ಸಿಂಗ್ ತನ್ನ 34ನೇ ವಯಸ್ಸಿಗೆ ಮೊದಲ ಭಾರಿಗೆ 1937ರಲ್ಲಿ ಚಪ್ರೌಲಿ ಪ್ರದೇಶದಿಂದ ಶಾಸಕರಾಗಿ ಆಯ್ಕೆಯಾದರು.ಕೃಷಿ ಬದುಕನ್ನು ಪ್ರೀತಿಸುತ್ತಿದ್ದ ಚರಣ್ ಸಿಂಗ್ ರೈತರ ಬದುಕು ಸುಧಾರಣೆಗೆ ತುಡಿತವನ್ನಿಟ್ಟುಕೊಂಡಿದ್ದರು.ಆದ್ದರಿಂದಲೇ 1938ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆಯನ್ನು ರೈತರ ಹಿತಾಸಕ್ತಿಯಿಂದ ವಿಧಾನಸಭೆಯಲ್ಲಿ ಮಂಡಿಸಿದರು, ಆ ಮೂಲಕ ರೈತ ಪರವಾದ ಧೋರಣೆ ಪ್ರದರ್ಶಿಸಿದರು. ಮದ್ಯವರ್ತಿಗಳು ಹಾಗೂ ವ್ಯಾಪಾರಿಗಳಿಂದ ರೈತರ ಶೋಷಣೆಯನ್ನು ತಡೆಯಲು ಈ ಮಸೂದೆ ಅವಕಾಶ ಕಲ್ಪಿಸಿತು. ಮುಂದೆ ಈ ಮಸೂದೆಯನ್ನು ದೇಶದ ಎಲ್ಲಾ ರಾಜ್ಯಗಳು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದವು, ಪಂಜಾಬ್ ರಾಜ್ಯ ಇದನ್ನು ಅನುಷ್ಟಾನಕ್ಕೆ ತಂದ ಮೊದಲ ರಾಜ್ಯವಾಯಿತು. 1952ರಲ್ಲಿ ಉತ್ತರ ಪ್ರದೇಶದ ಕಂದಾಯ ಸಚಿವರಾಗಿದ್ದಾಗ ಜಮೀನ್ದಾರಿ ಪದ್ಧತಿಯನ್ನು ನಿಷೇದಿಸುವ ಮತ್ತು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮಹತ್ವದ ನಿರ್ಧಾರ ಕೈಗೊಂಡರು. ಮುಂದೆ ಇದು ಇಡೀ ದೇಶದ ರೈತರ ಬದುಕಿನಲ್ಲಿ ಮಹತ್ವದ ಕ್ರಾಂತಿಕಾರಕ ಬದಲಾವಣೆಗೆ ನಾಂದಿಹಾಡಿತು. ಅದೇ ರೀತಿ ದೇಶದ ಹಿತದೃಷ್ಟಿಯಿಂದ ಅನೇಕ ಮಹತ್ವದ ದೂರದೃಷ್ಟಿ ನಿಲುವುಗಳನ್ನು ಹೊಂದಿದ್ದ ಚರಣ್ ಸಿಂಗ್ ಭಾರತೀಯ ಕಾರ್ಮಿಕ ಕಾಯ್ದೆಗೆ ಹೊಸ ರೂಪುರೇಷೆ ನೀಡಿದರು. ರೈತ ಪರವಾದ ಚಿಂತನೆಗಳು ದೇಶದ ರೈತ ಸಮುದಾಯದಲ್ಲಿ ಚರಣ್ ಸಿಂಗ್ ರ ಹೆಸರನ್ನು ಹಸಿರಾಗಿಸಿದವು. ದೇಶದ ಕೃಷಿ ಬದುಕಿಗೆ 1970ರ ಹಸಿರು ಕ್ರಾಂತಿಯ ನಂತರವೂ ಹೊಸ ಆಲೋಚನೆಗಳ ಮೂಲಕ ಚಿರಸ್ಥಾಯಿಯಾದ ಚರಣ್ ಸಿಂಗ್ ರೈತ ಸಮುದಾಯದಲ್ಲಿ ಸ್ಥಿರವಾದರು. ಹಾಗಾಗಿ ಅವರ ಹೆಸರಿನಲ್ಲಿ ರೈತದಿನಾಚರಣೆ ಆಚರಣೆಗೆ ಬಂದಿದೆ.

ಭಾರತದ ದೇಶದ ಕೃಷಿಗೆ 9000ಕ್ರಿ ಪೂ. ದ ಇತಿಹಾಸ ಇರುವುದು ಕಾಣಬರುತ್ತದೆ. ಅಲ್ಲಿಂದ ಅನೇಕ ಕಾಲಘಟ್ಟಗಳು ಸವೆದು ಹೋಗಿದ್ದರೂ ಆಧುನಿಕ ಪರಿಸರದ ನಿಲುವುಗಳು ಕೃಷಿ ಬದುಕನ್ನು ವರ್ತಮಾನದಲ್ಲಿ ತಲ್ಲಣಗೊಳಿಸುವಂತೆ ಮಾಡಿವೆ. ಉಸಿರಾಗಬೇಕಿದ್ದ ರೈತರ ಹಸಿರು ಭೂಮಿ ಕಾರ್ಪೋರೇಟ್ ಶಕ್ತಿಗಳ ಹಿಡಿತದಲ್ಲಿ ಸಿಲುಕುತ್ತಿರುವುದರಿಂದ ರೈತನ ಬದುಕು ಅಸಹನೀಯವಾಗಿದೆ, ಕೃಷಿ ಜಗತ್ತಿನ ಹೊಸ ಅವಿಷ್ಕಾರ ಮತ್ತು ಪದ್ದತಿಗಳು ರೈತನನ್ನು ಅನಿಶ್ಚಿತ ಪರಿಸ್ಥಿತಿಗೆ ದೂಡಿವೆ, ಕೃಷಿ ಕುರಿತ ಸರ್ಕಾರಿ ಪಾಲಸಿಗಳೂ ಜಾಗತಿಕ ವ್ಯಾಪಾರದ ಅನುಸಾರವಾಗಿ ನಡೆಯುತ್ತಿರುವುದರಿಂದ ಭವಿಷ್ಯದ ದಿನಗಳು ಮತ್ತಷ್ಟು ಅಯೋಮಯವಾಗುವ ಸ್ಪಷ್ಟ ಸೂಚನೆಯಿದೆ. ರೈತ ಜಾಗೃತನಾಗಬೇಕು ಜನಸಾಮಾನ್ಯ ಎಚ್ಚೆತ್ತುಕೊಳ್ಳಬೇಕು ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

Leave a comment