ಆಚರಣೆಯ ಹಿನ್ನೆಲೆ-ಉದ್ದೇಶ
ವಿಶ್ವ ಆರೋಗ್ಯ ದಿನಾಚರಣೆ 1950ರಲ್ಲಿ ಆರಂಭವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸ್ಥಾಪನೆಯಾದ ಏ. 7ರಂದು ಪ್ರತಿ ವರ್ಷ ಈ ದಿನ ಆಚರಿಸಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿ ಪ್ರತಿ ವರ್ಷ ಒಂದೊಂದು ಆಶಯ ನಿಗದಿ ಮಾಡಿ, ಅಂತಾರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಹಂತದವರೆಗೆ ಅದಕ್ಕೆ ಸಂಬಂಧಿಸಿ ಜಾಗೃತಿ ಮೂಡಿಸುವ ಕೆಲಸವನ್ನು ಈ ದಿನ ಮಾಡಲಾಗುತ್ತದೆ. ರಾಷ್ಟ್ರಗಳು ಹಾಗೂ ಸರ್ಕಾರೇತರ ಸಂಘಟನೆಗಳು ಈ ಅಭಿಯಾನ ದಲ್ಲಿ ಪಾಲ್ಗೊಳ್ಳುತ್ತವೆ. ಡಬ್ಲ್ಯೂಎಚ್ಒ ದಿಂದ ಕ್ಷಯರೋಗ ದಿನ, ಮಲೇರಿಯಾ ದಿನ, ತಂಬಾಕು ರಹಿತ ದಿನ, ರಕ್ತದಾನ ದಿನ, ಹೆಪಟೈಟಿಸ್ ದಿನ, ಏಡ್ಸ್ ದಿನಗಳನ್ನೂ ಪ್ರತಿ ವರ್ಷ ಆಚರಿಸಲಾಗುತ್ತದೆ.
ಈ ಸಲದ ಥೀಮ್ ‘ಮಧುಮೇಹ ಸೋಲಿಸಿ’
ಈ ಬಾರಿ ವಿಶ್ವ ಆರೋಗ್ಯ ದಿನಕ್ಕೆ ‘ಮಧುಮೇಹ ಮಣಿಸಿ’ ಎಂಬ ಥೀಮ್ ಹಾಕಿಕೊಳ್ಳಲಾಗಿದೆ. ನಿಯಂತ್ರಣ ಮಾಡಬಹುದಾದ ಕಾಯಿಲೆ ಯಾಗಿದ್ದರೂ ಮಧುಮೇಹಿಗಳ ಸಂಖ್ಯೆಯಲ್ಲಿ ಹೆಚ್ಚಳ ವಾಗುತ್ತಿದೆ. ಹಿಂದೆ ಸಿರಿವಂತರಿಗಷ್ಟೇ ಈ ಕಾಯಿಲೆ ಬರುತ್ತದೆ ಎಂಬ ಭಾವನೆ ಸಾರ್ವತ್ರಿಕವಾಗಿತ್ತು. ಆದರೆ ಈಗ ಮಧ್ಯಮ, ಕೆಳ ಮಧ್ಯಮವರ್ಗದವರೂ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅಂದಾಜಿನ ಪ್ರಕಾರ, ಜಗತ್ತಿನಲ್ಲಿ 35 ಕೋಟಿ ಜನರಿಗೆ ಮಧುಮೇಹ ವಿದ್ದು, ವರ್ಷಕ್ಕೆ 1 ಕೋಟಿ ಜನರು ಮಧುಮೇಹಕ್ಕೆ ಸಂಬಂಧಿ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಈ ಬಾರಿ ರೋಗ ನಿಯಂತ್ರಣ, ರೋಗಿಗಳ ಆರೈಕೆ, ನಿವಾರಣೆ ಕುರಿತು ಜಾಗೃತಿ ಮೂಡಿಸುವ ಗುರಿ ಹಾಕಿಕೊಳ್ಳಲಾಗಿದೆ.
2030ರಲ್ಲಿ ದ್ವಿಗುಣವಾಗುತ್ತೆ ರೋಗಿಗಳ ಸಂಖ್ಯೆ
ಅಂತಾರಾಷ್ಟ್ರೀಯ ಮಧುಮೇಹಿಗಳ ಒಕ್ಕೂಟದ ವರದಿ ಪ್ರಕಾರ 2013ರಲ್ಲಿ ವಿಶ್ವದಲ್ಲಿ ಮಧುಮೇಹಿಗಳ ಸಂಖ್ಯೆ 38.1 ಕೋಟಿಯಷ್ಟಾಗಿತ್ತು. 2030ರ ವೇಳೆಗೆ ಈ ಸಂಖ್ಯೆ ದ್ವಿಗುಣವಾಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಟೈಪ್ 2 ಡಯಾಬಿಟಿಸ್ ರೋಗಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 2030ರ ವೇಳೆ ಏಷ್ಯಾ ಮತ್ತು ಆಫ್ರಿಕಾ ದೇಶಗಳಲ್ಲಿ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ನಗರೀಕರಣದ ಪ್ರಭಾವ ಮತ್ತು ಜೀವನಶೈಲಿ ಬದಲಾಗಿರುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಪಾಶ್ಚಾತ್ಯ ಶೈಲಿಯ ಆಹಾರ ಕ್ರಮ ಹೆಚ್ಚಿನ ಜನರನ್ನು ಮಧುಮೇಹಕ್ಕೆ ತುತ್ತಾಗುವಂತೆ ಮಾಡುತ್ತಿದೆ ಎಂದು ಒಕ್ಕೂಟದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮಧುಮೇಹಿಗಳ ರಾಜಧಾನಿ ಭಾರತ
ಅಂತಾರಾಷ್ಟ್ರೀಯ ಮಧುಮೇಹ ಸಂಸ್ಥೆಯ ದಾಖಲೆಗಳ ಪ್ರಕಾರ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದೆ. ಸದ್ಯ ದೇಶದಲ್ಲಿ 6.2 ಕೋಟಿ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಂದರೆ ಭಾರತದ ವಯಸ್ಕರ ಜನಸಂಖ್ಯೆಯ ಶೇ.7.1ರಷ್ಟು ಜನರಿಗೆ ಮಧುಮೇಹವಿದೆ. 2035ರ ವೇಳೆಗೆ ಈ ಸಂಖ್ಯೆ 10.9 ಕೋಟಿಗೆ ಏರಿಕೆಯಾಗಲಿದೆ ಎಂದು ಐಎಚ್ಎ ತಿಳಿಸಿದೆ. ಮಧುಮೇಹದಿಂದಲೇ ದೇಶದಲ್ಲಿ ವರ್ಷದಲ್ಲಿ 10 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಧ್ಯಮವರ್ಗದ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಕ್ರಮಗಳ ಪರಿಣಾಮದಿಂದಾಗಿ ಸಕ್ಕರೆರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಡಯಟ್ ಸೋಡಾ ಕುಡಿದ್ರೆ ಮಧುಮೇಹ ಬಂದೀತು
ಡಯಟ್ ಸೋಡ ಕುಡಿಯುವುದರಿಂದ ದೇಹದ ತೂಕವನ್ನು ಹತೋಟಿಯಲ್ಲಿಬಹುದೆಂಬುದು ಹಲವರ ಕಲ್ಪನೆ. ಆದರೆ ಇದು ಸುಳ್ಳು ಎಂದು ಅಧ್ಯಯನವೊಂದು ತಿಳಿಸಿದೆ. ಜತೆಗೆ ಡಯಟ್ ಸೋಡಾ ಕುಡಿಯುವುದರಿಂದ ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಯೂ ಹೆಚ್ಚು ಎಂದು ಅಮೆರಿಕದ ಡಯಾಬಿಟಿಸ್ ಅಸೋಸಿಯೇಷನ್ ತಿಳಿಸಿದೆ. ಪ್ರತಿನಿತ್ಯ ಡಯಟ್ ಸೋಡಾ ಕುಡಿಯುವುದರಿಂದ ಟೈಪ್ 2 ಡಯಾಬಿಟಿಸ್ ಬರುವ ಸಾಧ್ಯತೆ ಶೇ.67 ಹೆಚ್ಚಾಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ. ಇದರ ಜತೆಗೆ ರಕ್ತ ದೊತ್ತಡ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳ, ಕೊಲೆಸ್ಟ್ರಾಲ್ ಮತ್ತು ಸೊಂಟದ ಸುತ್ತಲಿನ ಕೊಬ್ಬಿನ ಅಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗುತ್ತಿದೆ ಟೈಪ್2 ಡಯಾಬಿಟಿಸ್
ಟೈಪ್2 ಡಯಾಬಿಟಿಸ್ ಅನ್ನು ಸಾಮಾನ್ಯವಾಗಿ ಜೀವನಶೈಲಿಯ ಕಾಯಿಲೆ ಎನ್ನುವುದುಂಟು. ಇದು ನಮ್ಮ ಜೀವನಶೈಲಿಯ ಮೇಲೆಯೇ ಅವಲಂಬಿಸಿರು ವಂತದ್ದು. ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ತೂಕದ ಹೆಚ್ಚಳದಿಂದಾಗಿ ಇದು ಕಂಡುಬರುತ್ತದೆ. ಇದನ್ನು ಆಹಾರ ಕ್ರಮದ ಬದಲಾವಣೆ ಮತ್ತು ಔಷಧಗಳ ಸಹಾಯದಿಂದ ಹತೋಟಿಯಲ್ಲಿಡಲು ಸಾಧ್ಯವಿದೆ. ಆದರೆ ಪೂರ್ಣಪ್ರಮಾಣದಲ್ಲಿ ರೋಗದಿಂದ ಮುಕ್ತರಾಗಲು ಸಾಧ್ಯವಿಲ್ಲ. ಮಾನವನ ದೇಹದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಗ್ಲುಕೋಸ್ನ ಅಂಶ ಸಂಗ್ರಹ ವಾದಾಗ, ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಸರಿಯಾಗಿ ಬಳಸಿಕೊಳ್ಳದಿರುವಾಗ ಸಕ್ಕರೆ ಪ್ರಮಾಣ ಹೆಚ್ಚಳವಾಗಿ ಮಧುಮೇಹ ಕಂಡುಬರುತ್ತದೆ.
ಟಿವಿ ನೋಡಿದ್ರೆ ಡಯಾಬಿಟಿಸ್ ಅಪಾಯ
ಟಿವಿ ನೋಡುವುದರಿಂದ ಡಯಾಬಿಟಿಸ್ ಅಪಾಯ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ 3000 ಅಮೆರಿಕನ್ನರನ್ನು ಆಧರಿಸಿ ಪಿಟ್ಸ್ಬರ್ಗ್ ವಿಶ್ವವಿದ್ಯಾ ಲಯ ಅಧ್ಯಯನ ನಡೆಸಿದ್ದು, ದಿನಕ್ಕೆ 4 ಗಂಟೆಗಳ ಕಾಲ ಟಿವಿ ನೋಡುವವರಿಗೆ ಮಧುಮೇಹ ಬರುವ ಸಾಧ್ಯತೆಗಳು ಶೇ.14 ಹೆಚ್ಚಾಗಿರುತ್ತದೆ ಎಂದು ತಿಳಿಸಿದೆ. ಅಮೆರಿಕನ್ನರು ಸರಾಸರಿ ದಿನಕ್ಕೆ 5.11 ಗಂಟೆ ಟಿವಿ ನೋಡುತ್ತಾರೆ. ಪ್ರತಿಗಂಟೆಗೂ ಮಧುಮೇಹ ಬರುವ ಸಾಧ್ಯತೆ ಶೇ.3.4 ಹೆಚ್ಚಾಗಿರುತ್ತದೆ. ಇದರಂತೆ ಹೆಚ್ಚು ಕಾಲ ಕಂಪ್ಯೂಟರ್ ಎದುರು ಕಳೆಯುವುದು, ವಿಡಿಯೋ ಗೇಮ್ ಆಡುವುದು ಕೂಡಾ ಮಧುಮೇಹ ಬರುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಮಧುಮೇಹ ನಿಯಂತ್ರಣಕ್ಕೆ ಆಹಾರ ಕ್ರಮ
ಉತ್ತಮ ಮತ್ತು ನಿಯಮಿತ ಪ್ರಮಾಣದ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಗಳು ಮಧುಮೇಹ ರೋಗದಿಂದ ಬಳಲುತ್ತಿರುವವರ ಆರೋಗ್ಯ ರಕ್ಷಣೆಗೆ ಸಹಕಾರಿ. ನಾರಿನ ಅಂಶ ಹೆಚ್ಚಾಗಿರುವ ಆಹಾರ, ಹಣ್ಣು, ತರಕಾರಿ, ಕಾಳುಗಳು, ಮೀನು ಮುಂತಾದವುಗಳ ಸೇವನೆ ಉತ್ತಮ. ಕೊಬ್ಬು, ಉಪ್ಪಿನಂಶ ಕಡಿಮೆಯಿರುವ ಆಹಾರ ಸೇವನೆ ಮಧುಮೇಹದ ನಿಯಂತ್ರಣಕ್ಕೆ ಹೆಚ್ಚು ಸಹಕಾರಿ. ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ತೆರಳುವವರಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿದ್ದು, ಪ್ರತಿನಿತ್ಯ 30 ರಿಂದ 60 ನಿಮಿಷಗಳ ಕಾಲ ವ್ಯಾಯಾಮ ಮುಂತಾದ ದೈಹಿಕ ಚಟುವಟಿಕೆಗಳು ಆರೋಗ್ಯ ವೃದ್ಧಿಸಲು ಸಹಕಾರಿಯಾಗಿವೆ.
ಆಯುರ್ವೆದದಲ್ಲಿದೆ ಪರಿಹಾರ
ಮಧುಮೇಹದ ಬಗ್ಗೆ ಆಯುರ್ವೆದದಲ್ಲೂ ಉಲ್ಲೇಖವಿದೆ. ಆಯುರ್ವೆದದ ಪ್ರಕಾರ 20 ಬಗೆ ಮಧುಮೇಹ ಬರುತ್ತದೆ. ವಾತದಿಂದ ನಾಲ್ಕು, ಪಿತ್ತದಿಂದ 6 ಮತ್ತು ಕಫದಿಂದ 10 ಬಗೆಯ ಮಧುಮೇಹ ಬರುತ್ತದೆ. ಇದರ ಚಿಕಿತ್ಸೆಗಾಗಿ ಆರು ಬಗೆಯ ಔಷಧಗಳನ್ನು ಬಳಸಲಾಗುತ್ತದೆ. ಇದರ ಜತೆಗೆ ಆಹಾರ ಮತ್ತು ಹವ್ಯಾಸಗಳಲ್ಲಿ ಕೆಲ ಬದಲಾವಣೆಗೆ ಹೇಳಲಾಗಿದೆ. ನಿಯಮಿತ ಪ್ರಮಾಣದಲ್ಲಿ ಆಹಾರ ಸೇವನೆ, ಕಫ ದೋಷ ಉಂಟು ಮಾಡುವಂತ ಆಹಾರ ಸೇವನೆ ತ್ಯಜಿಸುವಂತೆ ಸೂಚಿಸಲಾಗುತ್ತದೆ. ಹಗಲಲ್ಲಿ ನಿದ್ರಿಸದಿರುವುದು, ಧೂಮಪಾನ ತ್ಯಜಿಸುವಂತೆಯೂ ಆಯುರ್ವೆದದಲ್ಲಿ ಉಲ್ಲೇಖಿಸಲಾಗಿದೆ.
ಬಾಲ್ಯದಲ್ಲೇ ಕಾಡುತ್ತದೆ ಟೈಪ್1 ಡಯಾಬಿಟಿಸ್
ಟೈಪ್1 ಡಯಾಬಿಟಿಸ್ ರೋಗಪ್ರತಿರೋಧಕ ವ್ಯವಸ್ಥೆ ಮೇಲೆಯೇ ಪ್ರಭಾವ ಬೀರುತ್ತದೆ. ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳನ್ನೇ ಹಾಳು ಗೆಡವುತ್ತದೆ. ಇದರಿಂದ ದೇಹದಲ್ಲಿ ಇನ್ಸುಲಿನ್ನ ಉತ್ಪತ್ತಿ ಆಗುವುದಿಲ್ಲ. ಆದರೆ ದೇಹದಲ್ಲಿರುವ ಸಕ್ಕರೆ ಅಂಶವನ್ನು ಶಕ್ತಿಯಾಗಿ ಪರಿವರ್ತಿಸುವುದರಲ್ಲಿ ಇನ್ಸುಲಿನ್ ಪ್ರಮುಖ ಪಾತ್ರವಹಿಸುವುದರಿಂದ ಇವುಗಳಿಲ್ಲದೆಯೇ ದೇಹದಲ್ಲಿ ಸಕ್ಕರೆ ಪ್ರಮಾಣ ಭಾರಿ ಏರಿಕೆಯಾಗುತ್ತದೆ. ಟೈಪ್1 ಡಯಾಬಿಟಿಸ್ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದರೂ, ಮಕ್ಕಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗಕ್ಕೆ ತುತ್ತಾಗುವವರು ಚುಚ್ಚುಮದ್ದಿನ ಮೂಲಕ ಆಗಿಂದಾಗೆ ಇನ್ಸುಲಿನ್ ತೆಗೆದುಕೊಳ್ಳಬೇಕಾಗುತ್ತದೆ.
ಯೋಗ ಮಾಡಿದರೆ ಮಧುಮೇಹದ ಚಿಂತೆಯಿಲ್ಲ
ಭಾರತೀಯ ಪುರಾತನ ಪದ್ಧತಿಗಳಲ್ಲಿ ಒಂದಾಗಿರುವ ಯೋಗ ಮಧುಮೇಹವನ್ನು ದೂರವಿರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪಾಶ್ಚಾತ್ಯ ರಾಷ್ಟ್ರಗಳ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನಗಳ ಪ್ರಕಾರ ಯೋಗ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಯೋಗ ಮಾಡುವಾಗ ಮನುಷ್ಯ ಹೆಚ್ಚಿನ ಶಕ್ತಿ ವ್ಯಯಿಸುವ ಅಗತ್ಯವಿರುವುದರಿಂದ ದೇಹದಲ್ಲಿರುವ ಕೊಬ್ಬು ಮತ್ತು ಸಕ್ಕರೆ ಪ್ರಮಾಣ ಹೆಚ್ಚು ಬಳಕೆಯಾಗುತ್ತದೆ. ಇದರಿಂದ ನೈಸರ್ಗಿಕವಾಗಿಯೇ ದೇಹದಲ್ಲಿರುವ ಸಕ್ಕರೆ ಪ್ರಮಾಣ ಹತೋಟಿಯಲ್ಲಿರುತ್ತದೆ. ಅರ್ಧ ಮತ್ಸ್ಯೇಂದ್ರಾಸನ, ಧನುರಾಸನ, ವಕ್ರಾಸನ, ಮತ್ಸ್ಯೇಂದ್ರಾಸನ, ಹಲಾಸನ ಮಧುಮೇಹ ನಿಯಂತ್ರಣಕ್ಕೆ ಸಹಕಾರಿಯಾಗಿವೆ.
ಮಧುಮೇಹದ ಬಗ್ಗೆ ನಿರ್ಲಕ್ಷ್ಯ ಸಲ್ಲ
ಬಹುತೇಕವಾಗಿ ಮಧುಮೇಹ ಇದೆಯೇ ಎಂಬ ಬಗ್ಗೆ ಯಾರೂ ಪರೀಕ್ಷೆಗಳನ್ನು ನಡೆಸುವುದೇ ಇಲ್ಲ. ಸಕ್ಕರೆ ಕಾಯಿಲೆಯ ಅಡ್ಡ ಪರಿಣಾಮಗಳು ಬೀರಿದ ಬಳಿಕವಷ್ಟೇ ಇದರ ಅರಿವಾಗುತ್ತದೆ. ಮಧುಮೇಹದ ಕಾರಣದಿಂದ ಹೃದಯರೋಗ, ಕುರುಡುತನ, ನರಸಂಬಂಧಿ ಕಾಯಿಲೆ, ಲಕ್ವ, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್ಗೆ ಒಳಗಾಗುವ ಸಾಧ್ಯತೆಯಿದೆ. ದಾಖಲೆಗಳ ಪ್ರಕಾರ ಪ್ರತೀವರ್ಷ 2 ಲಕ್ಷ ಅಮೆರಿಕನ್ನರು ಇದಕ್ಕೆ ಬಲಿಯಾಗುತ್ತಾರೆ. ಹಾಗೆಂದು ರೋಗಿಗಳು ಈ ಬಗ್ಗೆ ಚಿಂತಾಕ್ರಾಂತರಾಗುವ ಅಗತ್ಯವಿಲ್ಲ. ಸರಿಯಾದ ನಿರ್ವಹಣೆಯಿಂದ ಡಯಾಬಿಟಿಸ್ ಅನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಾಧ್ಯವಿದೆ.
ಸಕ್ಕರೆ ಪ್ರಮಾಣ ತಿಳಿಯಲು ನೂತನ ಆಪ್
ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆ ಪ್ರಮಾಣ ವನ್ನು ಪರೀಕ್ಷಿಸಲು ಡೆಕ್ಸ್ ಕಾಮ್ ಶೇರ್ ಡಿವೈಸ್ ಮತ್ತು ಡೆಕ್ಸ್ಕಾಮ್ ಜಿ4 ಎಂಬ ಆಪ್ ರೂಪಿಸಲಾಗಿದ್ದು, ಇದರಲ್ಲಿ ಒಂದನ್ನು ರೋಗಿಯ ಮೊಬೈಲ್ನಲ್ಲೂ ಇನ್ನೊಂದನ್ನು ರೋಗಿಯ ಸಂಬಂಧಿಕರ ಮೊಬೈಲ್ನಲ್ಲೂ ಅಳವಡಿಸಲಾಗಿರುತ್ತದೆ. ರೋಗಿಯ ದೇಹಕ್ಕೆ ಅಳವಡಿಸಿರುವ ಸಣ್ಣ ಸೆನ್ಸರ್ನ ಸಹಾಯದಿಂದ ಆತನ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಆಪ್ ಗ್ರಹಿಸುತ್ತದೆ. ನಂತರ ಈ ಬಗ್ಗೆ ರೋಗಿಗೆ ಮಾಹಿತಿ ನೀಡುವುದರ ಜತೆಗೆ ಅವರ ಸಂಬಂಧಿಕ ರಿಗೂ ಮಾಹಿತಿ ರವಾನಿಸುತ್ತದೆ. ಇದರಿಂದ ಆಗಿಂದ್ದಾಗೆ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕಾದವರಿಗೆ ಅನುಕೂಲವಾಗುತ್ತದೆ.